ಜ್ಞಾನ ಮತ್ತು ಶಿಕ್ಷಣ ಇಲ್ಲದೆ ಹೂಡಿಕೆ ಮಾಡಿದರೆ ಗುರಿ ಇಲ್ಲದ ಪ್ರಯಾಣದಂತೆ. ಇದರಿಂದ ಹೂಡಿಕೆಯ ಆರ್ಥಿಕ ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂದು ವಿವೇಕಾನಂದ ಸ್ನಾತಕೋತರ ಅಧ್ಯಯನ ಕೇಂದ್ರದ ಸಮನ್ವಯಿಕಾರರಾದ ಡಾ| ವಿಜಯ ಸರಸ್ವತಿ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘ ಆಯೋಜಿಸಿದ ’ಬಂಡವಾಳ ಮಾರುಕಟ್ಟೆ ಮತ್ತು ಹೂಡಿಕೆಯ ತಿಳುವಳಿಕೆ’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ದಿನದಿಂದ ದಿನಕ್ಕೆ ನವೀಕರಣಗೊಳ್ಳುತ್ತಿರುವ ಮತ್ತು ಬದಲಾಗುವ ವಾಣಿಜ್ಯ ಲೋಕದಲ್ಲಿ ವರ್ತಮಾನದ ಆದಾಯವನ್ನು ಭವಿಷ್ಯಕ್ಕೆ ಉಳಿಸುವ ಮತ್ತು ಆ ಉಳಿತಾಯದಲ್ಲಿ ಲಾಭ ಗಳಿಸುವ ಹಲವಾರು ಸಾಧ್ಯತೆಗಳು ಇವೆ. ಆದರೆ ಜನಸಾಮಾನ್ಯರಿಗೆ ಹೂಡಿಕೆಯ ಜ್ಞಾನ ಮತ್ತು ಶಿಕ್ಷಣ ಇಲ್ಲದ ಕಾರಣ ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ. ವಿವಿಧ ಭದ್ರತೆಗಳಲ್ಲಿ ಸರಿಯಾಗಿ ಹೂಡಿಕೆ ಮಾಡುವುದರಿಂದ ಭವಿಷ್ಯದ ಉಳಿತಾಯಕ್ಕೆ ಒಂದು ಯೋಜನೆಯೂ ಆಗಿರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಜೀವನ್ದಾಸ್ ಮಾತನಾಡಿ ಹೂಡಿಕೆಯ ಜ್ಞಾನ ವಿದ್ಯಾರ್ಥಿ ಜೀವನದಲ್ಲೇ ಆರಂಭವಾಗಬೇಕು ಎಂದರು.
ವಿದ್ಯಾರ್ಥಿನಿ ಶ್ರೀವಿದ್ಯಾ ಸ್ವಾಗತಿಸಿ ತಿಲಕ್ ರಾಜ್ ವಂದಿಸಿದರು. ಕಾರ್ಯಕ್ರಮವನ್ನು ಸ್ನಿಗ್ಧಾ ಶೆಟ್ಟಿ ನಿರ್ವಹಿಸಿದರು.